ಶುಕ್ರವಾರ, ಮಾರ್ಚ್ 1, 2019

ದಾಟು

ಅಪ್ಪ:
ಇರಸು ಮುರಸು ಸುದ್ದಿ ತಿಳದಾಗಿನಿಂದಲೂ ಇತ್ತು. ಒಂದು ಕೈ ನೋಡೇಬಿಡೋದು ಅಂತ ಠರಾಯಿಸಿ ಬೆಂಗಳೂರಿಗೆ ಬಂದಿದ್ದೆ. ಅವಳೇ ಬುಕ್ ಮಾಡಿದ ಕ್ಯಾಬ ಹಿಡಿದು ದೂರದ ಅವಳ ಅಪಾರ್ಟ್ಮೆಂಟ್ ಸೇರಿ ಪುಲಕಿತ ರಸ್ತೋಗಿ ಅನ್ನವವ ಅದುವರೆಗೂ ಅಪರಿಚಿತವಾಗಿದ್ದ ವ್ಯಕ್ತಿ ಮಾಡಿದ ಅಡಿಗೆ ಉಂಡು ಕೂತಾಗಲೂ ತಳಮಳ ಕಮಿಯಾಗಿರಲಿಲ್ಲ. ಊಟ ಬಡಿಸುವಾಗ ಅವ ಹೇಳಿದ ಮಾತು “ವಸುಗೆ ನನ್ನ ಕುಕಿಂಗ್ ಸೇರುತ್ತದೆ..” ಅಂದಿದ್ದು ಸಹ ಪರಿಣಾಮ ಬೀರಿರಲಿಲ್ಲ. ಹಿಂದಿ ಅಥವಾ ಇಂಗ್ಲೀಶ್ ಭಾಷೆಯಲ್ಲಿ ಮಾತ್ರ ಅವನೊಡನೆ ಸಂವಹನ ಸಾಧ್ಯ. ವಸು ಅವನಿಗೆ ಕನ್ನಡ ಕಲಿಸುತ್ತಿದ್ದಾಳೆ ಅಂತ ಹೇಳಿಕೊಂಡವನ ನೋಡಿದೆ. ಇವ ಬಂದ ಮೇಲೆ ಸಾಕಷ್ಟು ಅಲ್ಲೋಲ ಕಲ್ಲೋಲ ಆಗೇದ..ಇಂಥವನೊಡನೆ ನಗುತ್ತ ಮಾತಾಡಬಾರದು ಅಂತ ನಿರ್ಧಾರ ಮಾಡಿದಂತೆ..ಸುಮ್ಮನೇ ಕೂತಿದ್ದೆ. ನಾನು ಟಿವಿ ನೋಡುತ್ತಿರುವಾಗ ಅವ ತಯಾರಾಗಿ ಬಂದು ತನಗೆ ಒಂದು ಮೀಟಿಂಗ ಇರುವುದಾಗಿ, ವಸು ಇನ್ನೇನು ಒಂದೂವರೆ ತಾಸು ಕಳೆದು ಬರುತ್ತಾಳೆ ಅಂತ ತಿಳಸಿ ಹೋದ.

“ಒಂದೆರಡು ಹೊಡತ ಹೊಡದ್ರೂ ಅಡ್ಡಿ ಇಲ್ಲ..ಆದರ ಸೋಕ್ಷಮೋಕ್ಷ ಮಾಡದ ವಾಪಸ ಬರಬ್ಯಾಡರಿ..” ಹೆಂಡತಿ ರಮಾ ಆಡಿದ ಮಾತು ನೆನಪಾತು.ಹೊಡತ ಬಡಿತಗಳಿಂದ ಈ ಸಮಸ್ಯಾ ಬಗೀಹರೀಲಾರದ್ದು..ಇದಕ್ಕ ನೇರಾನೇರ ಮಾತುಕತೀನ ಮದ್ದು ಅಂತ ತಿಳಿಸಿಹೇಳಿ ಬಂದಿದ್ದೆ. ವಸು ಹಿಂಗ ಮಾಡತಾಳ ಅಂತ ಕನಸಿನ್ಯಾಗೂ ನಾ ಎಣಸಿರಲಿಲ್ಲ. ಅದೆಂಗ ಒಂದು ವಯಸ್ಸು ದಾಟಿದ ಮ್ಯಾಲ ಮಕ್ಕಳಿಗೆ ಒಂದು ಪ್ರಮುಖ ನಿರ್ಧಾರ ತಗೊಳ್ಳುವಾಗ ಅಪ್ಪ ಅವ್ವಗ ಒಂದು ಮಾತು ತಿಳಸುವುದು ಬ್ಯಾಡ ಅನಸತದ..ಅವರಿಂದ ನಕಾರ ಸಿಗತದ ಅನ್ನುವ ಖಾತ್ರಿನೋ ಅಥವಾ ಇದು ನಂದು ಲೈಫು..ಇದರ ನಿರ್ಣಯಾ ಇನ್ನ ಮುಂದ ನಾನ ತಗೋತೀನಿ ಅಂತ ಸಾರಿ ಹೇಳುವ ಎದೆಗಾರಿಕನೋ ಗೊತ್ತಾಗಲಿಲ್ಲ. ಕೈತುಂಬ ಸಿಗೋ ಸಂಬಳ, ನಾಕು ದೇಶ ಸುತ್ತಿದ ಅನುಭವ ಅಥವಾ ಅಪರಿಚಿತ ಊರಾಗ ಬಂದು ನೆಲೆ ನಿಂತುಕೊಂಡ ಹಮ್ಮು ಎಲ್ಲಾನೂ ಹಿಂಗ ಮಾತು ಕೇಳದ್ದಕ್ಕ ಇಂಬು ಕೊಡತಾವ .ಇಂತಹ ಪ್ರಶ್ನಿಗಳು ಚುಚ್ಚತಿದ್ದವು. ನೈತಿಕತಾ ಅನ್ನುವುದು ನಮ್ಮ ಪೀಳಿಗೆಗೆ ಮಾತ್ರ ಇತ್ತೋ ಹೆಂಗ..
ವಸುನ ಸುದ್ದಿ ತಿಳದಾಗಿನಿಂದಲೂ ರಮಾ ಕಡೆಯಿಂದ ಬರೇ ಚುಚ್ಚುಮಾತುಗಳು ಕೇಳಿದ್ದೆ…

“ನೀವ ಮಾಡಿದ ಅಚ್ಛಾದ ಪರಿಣಾಮ ಇದು. ಅಕಿಗೆ ಅಷ್ಟು ಓದಸಬ್ಯಾಡರಿ..ಅಂದೆ ಕೇಳಲಿಲ್ಲ..ಹೋಗಲಿ ಓದು ಮುಗದ ಮ್ಯಾಲೆ ಮದುವಿ ಮಾಡೋಣು ಅಂದೆ..ಅಕಿ ಕರಿಯರ್ ಅಂತ ಕುಣದಳು. ನೀವು ಚಪ್ಪಾಳಿ ಹೊಡದು ಬೆಂಬಲಾ ಕೊಟ್ರಿ..”

ವಸುಗ ಪಿಯುಸಿಯೊಳಗ ಮಾರ್ಕು ಛಲೋ ಬಂದಿದ್ದವು. ಇಂಜಿನೀಯರ ಆಗಲಿ ಅನ್ನುವುದು ಆಶಾ..ಶಿಕ್ಷಣಕ್ಕ ಸಾಲಾ ಮಾಡಿದ್ದೆ. ಮಗಗ ಓದಿನ್ಯಾಗ ಅಷ್ಟು ಆಸಕ್ತಿ ಇರಲಿಲ್ಲ. ಅವ ಬಿಕಾಮ್ ಮುಗಸಿ ಒಂದು ಸಹಕಾರಿ ಬ್ಯಾಂಕಿನ್ಯಾಗ ಕೆಲಸಕ್ಕ ಸೇರಿಕೊಂಡಿದ್ದ. ವಸುಗ ಕನಸಿದ್ದವು..ಅವಕ್ಕ ನಾ ನೀರುಹಾಕಿ ಪಾಲಿಸಿದೆ. ಧಾರವಾಡದಾಗಿನ ಕಾಲೇಜಿನ್ಯಾಗ ಅಕಿಗ ಸೀಟು ಸಿಕ್ಕಿತ್ತು. ಇಡೀ ಬಳಗದವರು ನಾ ಮಾಡಿದ ಈ ನಿರ್ಧಾರಕ್ಕ ಸಪೋರ್ಟು ಕೊಟ್ಟಿರಲಿಲ್ಲ..ಹೆಣ್ಣುಹುಡುಗಿಯರಿಗೆ ಹಿಂಗ ಸಾಲಾ ಮಾಡಿ ಶಿಕ್ಷಣ ಕೊಡಸುವುದು ದಂಡ ಅನ್ನೋದು ಅವರ ಮಾತು. ನನಗ ಒಂದು ಬ್ಯಾರೆ ಕೆಲಸ ಮಾಡಿದ ಹೆಮ್ಮೆ. ಇಂಜಿನೀಯರ ಅನಿಸಿಕೋತಾಳ ಮಗಳು ಇದು ಹೆಮ್ಮೆಯ ವಿಷಯವಾಗಿತ್ತು. ಕೊಂಕು ಮಾತು ಬಂದವು. ರಮಾಳ ಅಣ್ಣ ವೆಂಕಣ್ಣ ಹೇಳಿದ್ದ..

“ಭಾವುಜಿ ನಾಳೆ ಅಕಿ ನೌಕರಿ ಮಾಡತಾಳ ಬೆಂಗಳೂರಾಗ ಕೆಲಸ ಸಿಗತದ ಪಗಾರನೂ ಛಲೋ ಸಿಗತದಂತ ಸಾಫ್ಟವೇರದಾಗ..ದುಡ್ಡು ಕೈಗೆ ಬಂದಾಗ ಅಕಿ ಮಾತು ಕೇಳತಾಳಂತ ಏನು ಖಾತ್ರಿ..ನೋಡರಿ ಅಕಿಗೆ ಶಿಕ್ಷಣದ ಸಲುವಾಗಿ ಸಾಲಾ ಮಾಡದ ಮದುವಿ ಸಲುವಾಗಿ ಮಾಡರಿ..ಛಲೋ ಸಂಬಂಧ ನಾನು ಹುಡಕತೇನಿ”

ಟಿಪಿಕಲ್ ಮಾಳಮಡ್ಡಿ ಮಠದ ಓಣಿ ಮಾತು ಅವು. ವೆಂಕಣ್ಣನಂತಹವರ ಮೆಂಟಾಲಿಟಿ ಇಷ್ಟ ಇದು ಸುಧಾರಣಾ ಆಗುವ ಮಂದಿ ಅಲ್ಲ ಅಂತ ಅನಿಸಿತ್ತು.ವಸು ಇಂಜಿನೀಯರಿಂಗ ಕಾಲೇಜಿಗೆ ಹೊರಟಳು. ನನಗೇನೋ ಸಾಧಿಸಿದ ಖುಶಿ.
ಮೊದಲಿಂದಲೂ ಈ ಅತಿಯಾದ ಸಂಪ್ರದಾಯಪಾಲನಾ ಆಗಿ ಬರತಿರಲಿಲ್ಲ.ಅಪ್ಪ ಮತ್ತು ಅವ್ವ ಇಬ್ಬರೂ ಕಟ್ಟಾಸಂಪ್ರದಾಯವಾದಿಗಳು.ಆರಾಧನಿ, ಏಕಾದಶಿಯ ನಿರ್ಜಲ ಉಪವಾಸ, ತಪ್ತ ಮುದ್ರಾಧಾರಣಾ ಎಲ್ಲಾನೂ ಪಾಲಿಸಿಕೋತ ಬಂದಿದ್ದರು.ಒಂದು ಹಂತದವರೆಗೆ ನಾನು ಪಾಲಿಸಿದ್ದೆ..ವಯಸ್ಸು ಬೆಳೆದಂತೆ ಅವುಗಳ ಬಗ್ಗೆ ಪ್ರಶ್ನೆ ಮೂಡಿದವು ಕೇಳಿದಾಗ ಉತ್ತರ ಸಿಗಲಿಲ್ಲ. ಅಪ್ಪ ಅಂತೂ ನಾ ಕೇಳುವ ಪ್ರಶ್ನಿಗಳಿಗೆ ಸಿಡಕತಿದ್ದ.ವಾದ ವಿವಾದ ಆಗತೊಡಗಿದವು. “ಎಂಥಾ ಮಗ ಹುಟ್ಟಿದೇಲೇ” ಅನ್ನುವದು ಅಪ್ಪನದು ಕೊರಗು.ಹಿಂಗ ಒಮ್ಮೆ ಜೋರು ವಾದ ನಡೆದಾಗ ಅಪ್ಪ ಕುಸದು ಬಿದ್ದವ ಮ್ಯಾಲೆ ಏಳಲೇ ಇಲ್ಲ. ಅವನ ನೌಕರಿ ಅನುಕಂಪದ ಆಧಾರದ ಮೇಲೆ ನಂಗ ಬಂತು.ಅವ್ವ ಹಟಾ ಹಿಡದು ಪಕ್ಕಾ ಸಂಪ್ರದಾಯವಾದಿ ಮನೆತನದ ರಮಾಗೆ ಗಂಟು ಹಾಕಿದಳು.

ರಮಾಳದು ಸಂಪ್ರದಾಯ,ಮಡಿ ಹುಡಿಯೊಳಗ ಒಂದು ಹೆಜ್ಜಿ ಮುಂದ ಇತ್ತು. ಹರೇದ ಕಾಲ ಛಂದನ ಹೆಂಡತಿ ಬ್ಯಾರೆ ಬಯಕಿಗಳು ಗರಿಗೆದರತಿದ್ದವು ಆದರ ರಮಾಳ ವೃತ,ನಿಯಮ ಅಡ್ಡಿಯಾಗತಿದ್ದವು.ಬಹಳ ಸಲ ಅಕಿಗೆ ಎದುರು ಕೂಡಿಸಿಕೊಂಡು ಹೆಂಗ ಜಗತ್ತು ಬದಲಾಗೇದ ಅದರ ಗತಿಗೆ ತಕ್ಕಂಗ ಹೆಜ್ಜಿ ಹಾಕಬೇಕು ಅಂತೆಲ್ಲ ಹೇಳತಿದ್ದೆ.ಆದರ ಏನೂ ಪ್ರಯೋಜನ ಆಗಲಿಲ್ಲ.ರಮಾ ಅಡಿಗಿ ಛಲೋ ಮಾಡತಿದ್ದಳು..ಹಾಸಿಗಿಯೊಳಗೂ ಸುಖ ಕೊಡತಿದ್ದಳು..ಆದರ ನಾ ಹುಡುಕುತಿದ್ದ ಅಂತರಂಗದ ಗೆಳತಿ ಅವಳೆಂದೂ ಆಗಲಿಲ್ಲ.

ಚೊಚ್ಚಲ ಗಂಡು ಹಡೆದ ಖುಶಿ..ಇನ್ನೊಂದು ಗಂಡು ಆಗಲಿ ಇದು ಅವಳ ಹಂಬಲ. ಆದರ ಪ್ರಮೋದ ಹುಟ್ಟಿದಮ್ಯಾಲೆ ಎರಡುಮೂರು ಸಲ ಅಬಾರ್ಷನ ಆತು. ನಾಜೂಕಾದಳು. ನಾ ತಿಳಿಹೇಳಿದೆ..ಆದರ ಅಕಿ ಮಾತು ಕೇಳಲಿಲ್ಲ. ಆದರ ಗರ್ಭಕಟ್ಟಿ ಹೊರಬಂದಾಕಿ ವಸು ಆಗಿದ್ದಳು. ಹೆಣ್ಣು ಅಪರೂಪ..ನನಗೂ ಮನಸಿತ್ತು ಹೆಣ್ನಾಗಲಿ ಅಂತ. ರಮಾಗ ಅಸಮಾಧಾನ ಇತ್ತು..ಮ್ಯಾಲಾಗಿ ಮತ್ತ ಬಸರಾದರ ಧೋಖಾ ಅದ ಅದ ಅಂತ ಡಾಕ್ಟರರು ಹೇಳಿದ್ದರು.

ವಸು ಹುಟ್ಟಿ ಬೆಳೆದು ನಿಂತಾಗ ಒಂದು ಠರಾಯಿಸಿದೆ. ರಮಾಳ ಪ್ರಭಾವ ಇಕಿಮ್ಯಾಲೆ ಆಗಗೊಡಬಾರದು ಅಂತ.ಹಿಂಗಾಗಿ ಏನ ವಾದ ಆದಾಗ ವಸುಗ ಸಪೋರ್ಟಮಾಡತೊಡಗಿದೆ.”ನಿಮ್ಮ ಅಚ್ಛಾದಿಂದ ಅಕಿ ಕೆಡತಾಳ”ಅನ್ನುವ ರಮಾಳ ಗೊಣಗಾಟಕ್ಕ ಕ್ಯಾರೆ ಅನ್ನಲಿಲ್ಲ.ಇಂಜಿನೀಯರಿಂಗ ಓದುವಾಗ ವಸುಗ ಕೇಳಕೊಂಡು ಅಕಿ ಸಹಪಾಠಿಗಳ ಫೋನು ಬರತಿದ್ದವು.ಕೆಲವು ಸಲ ಗಂಡು ಹುಡುಗರು ಸಹ ಫೋನುಮಾಡತಿದ್ದರು.ಪ್ರಾಜೆಕ್ಟು, ಅಸೈನಮೆಂಟು, ಸೆಮಿನಾರು ಇಂತಹ ಕಾಲೇಜಗೆ ಸಂಬಂಧಿಸಿದ ಫೋನು ಅವು. ರಮಾಗ ಮಾತ್ರ ಗಂಡುಹುಡುಗರು ಫೋನು ಯಾಕ ಮಾಡತಾರ..ಅವರ ಜೋಡಿ ಯಾಕ ವಸುಗ ಸಲಿಗಿ..ಹಿಂಗ ವಾದ ಹಾಕತಿದ್ದಳು.ನಾ ಅಕಿ ಜೋಡಿ ಹಾಕ್ಯಾಡತಿದ್ದೆ. ಸೆರಗಿನಿಂದ ಕಣ್ಣೀರು ಒರೆಸಿಕೋತ ರಮಾ ಸುಮ್ಮನಾಗತಿದ್ದಳು. ಬರತಾಬರತಾ ಮನಿಯೊಳಗ ಎರಡು ಪಾರ್ಟಿ ಆದವು.ಪ್ರಮೋದ ಬಿಕಾಮ್ ಮುಗಸಿ ಸಹಕಾರಿ ಬ್ಯಾಂಕಿನ್ಯಾಗ ನೌಕರಿ ಹಿಡದಿದ್ದ.ಅವಾ ಯಾವಾಗಲೂ ಅವರ ಅವ್ವನ ಬಾಜು. ವಸು ನನ್ನ ಆಶ್ರಯಿಸಿದ್ದಳು.ಛಲೋ ಮಾರ್ಕು ಬೀಳತಿದ್ದವು..ಇಕಿಗೆ ಸಾಲಾ ಮಾಡಿ ಇಂಜಿನೀಯರಿಂಗ ಓದಿಸಿ ನಾನು ತಪ್ಪು ಮಾಡಿಲ್ಲ ಅನ್ನುವ ಸಮಾಧಾನ ಬಂತು.ಅದು ಇನ್ನೂ ಹೆಚ್ಚಾಗಿದ್ದು ಅಕಿ ಕ್ಯಾಂಪಸ್ಸಿನ್ಯಾಗ ಆಯ್ಕೆಯಾಗಿ ಬೆಂಗಳೂರಿನ ಕಂಪನಿಗೆ ಕೆಲಸಕ್ಕೆಂದು ಹೊರಟುನಿಂತಾಗ.
ವಸುಗೆ ಸಿಕ್ಕ ಪ್ಯಾಕೇಜು ನಂಗ ದಂಗ ಬಡಸಿತ್ತು. ಅಷ್ಟು ಪಗಾರದ ಕನಸು ಸಹ ನಾ ಕಂಡಿರಲಿಲ್ಲ. ಪ್ರಮೋದಗೂ ಅಂತಹ ದೊಡ್ಡ ಪಗಾರ ಇರಲಿಲ್ಲ. ಈಗ ಅವಗ ಮದುವಿ ಆಗಿತ್ತು.ಹೆಂಡತಿ ಅವನಿಗೆ ಅನುರೂಪ ಆಗಿದ್ದಳು ಅದಕಿಂತಾ ಅತ್ತಿ ಜೋಡಿ ಛಲೋ ಹೊಂದಿಕೊಂಡಿದ್ದಳು. ಬೆಂಗಳೂರಿಗೆ ಹೋದ ಹೊಸದರಲ್ಲಿ ವಾರಕ್ಕೊಮ್ಮೆ ಬರತಿದ್ದ ವಸು ಕ್ರಮೇಣ ತಿಂಗಳಿಗೊಮ್ಮೆ, ಮೂರು ತಿಂಗಳಿಗೊಮ್ಮೆ ಬರತೊಡಗಿದಳಯ. ಇದಕ್ಕ ಮುಖ್ಯ ಕಾರಣ ಅಕಿ ಬಂದಾಗೆಲ್ಲ ರಮಾ ತಾನು ಕಲೆಹಾಕಿದ ವರಗಳ ಫೋಟೋ,ಕುಂಡಲಿ ಅಕಿ ಮುಂದ ಹರವತಿದ್ದಳು. ಮದುವಿ ಆಗು ಅನ್ನುವ ಅವಳ ಒತ್ತಾಯ ಜೋರಾಗಿತ್ತು. ಯಾಕೋ ವಸು ಆ ವಿಷಯದಾಗ ನಿರಾಸಕ್ತಿ ತೋರಸತಾಳ ಅನ್ನೊ ಭಾವ ನಂಗೂ ಬಂತು. ಕೇಳಿದೆ. ಅಕಿ ತನ್ ಕರಿಯರ್ ಗೋಲುಗಳು, ಮುಂದ ತಾನು ಪಡೆಯಬೇಕೆಂದಿರುವ ಸ್ಥಾನಮಾನಗಳ ಬಗ್ಗೆ ಹೇಳಿಕೊಂಡಳು. ಈ ಸಧ್ಯ ಮದುವಿ ಬೇಡ ಇದು ಅವಳ ಖಚಿತ ನಿಲುವಾಗಿತ್ತು.ನನಗೂ ಅಕಿ ಮಾತು ಪಟಾಯಿಸಿ ಅವಳ ಪರ ವಾದ ಹಾಕಿದೆ. ಈ ವಿಷಯದಾಗೂ ನಾನು ವಸುಳ ಪರ ನಿಂತಿದ್ದು ರಮಾಗೆ ಸೇರಿರಲಿಲ್ಲ. ಒಂದು ಪ್ರಾಜೆಕ್ಟ ನಿಮಿತ್ತವಾಗಿ ಅಮೇರಿಕಾಕ್ಕೆ ಹೋಗಬೇಕಾಗಿ ಬಂದಿದೆ ಅಂತ ವಸು ಹೇಳಿದಾಗ ಖುಶಿಯಾಗಿತ್ತು ಆದರ ರಮಾ “ಮದುವಿ ಮಾಡಕೊಂಡು ಎಲ್ಲಾದರೂ ಹೋಗು,ಗಂಡ ಒಪ್ಪಿಗಿ ಕೊಟ್ರ” ಅನ್ನುವ ಮಾತಿಗೆ ವಸು ತಿರುಗಿ ನಿಂತಳು. ತಾನು ಹೊರಟಿದ್ದು ಕೆಲಸದ ಸಲುವಾಗಿ..ಇದು ತನ್ನ ಶಾಣ್ಯಾತನಕ್ಕ ಸಿಕ್ಕ ಪ್ರತಿಫಲ ಅಂತೆಲ್ಲ ವಾದ ಹೂಡಿದಳು. ಅವಳ ವಾದದಾಗ ಹುರುಳಿತ್ತು. ಅಮೇರಿಕಾದಾಗ ಆರುತಿಂಗಳು ಕಳೆದು ಬಂದವಳಿಗೆ ಕಂಪನಿ ಪ್ರಮೋಶನ ನಿಡಿ ಗೌರಿಸಿತ್ತು ಹಂಗ ಕೆಲಸದ ನಿಮಿತ್ತ ಜರ್ಮನಿ, ಫಿನಲೆಂಡ ಹಿಂಗ ಬ್ಯಾರೆ ದೇಶಗಳಿಗೂ ಅಕಿ ಹೋಗಿಬಂದಳು. ನನ್ನ ಎದೆ ಅಭಿಮಾನದಿಂದ ಉಬ್ಬಿ ಹೋಗಿತ್ತು.

ಈ ಎಲ್ಲದರ ನಡುವೆ ಅಪಶೃತಿ ಕೇಳಿದ್ದು ತಿಂಗಳ ಹಿಂದ. ವಸು ಧಾರವಾಡಕ್ಕ ಬರದ ಬಹಳ ದಿನಾ ಆಗಿದ್ದವು. ಸೊಸೆಯ ಸಂಬಂಧಿ ಒಬ್ಬ ತಂದ ಸುದ್ದಿ ಹೀಗಿತ್ತು. ಪುಲಕಿತ್ ರಸ್ತೋಗಿ ಅನ್ನುವವನ ಜೋಡಿ ವಸು ಮದುವೆಯಾಗದೇ ಒಂದೇ ಮನೆಯಲ್ಲಿದ್ದಾಳೆ ಅದಕ್ಕ ಲಿವಇನ್ ರಿಲೇಶನ್ ಅಂತ ಹೆಸರು. ಈ ಸುದ್ದಿ ಎಲಾರಿಗೂ ಆಘಾತ ತಂದಿತ್ತು.ನನಗೂ ವಿಚಿತ್ರ ಅನಿಸಿತ್ತು.ಅವಳು ಈ ನಿರ್ಧಾರ ತಗೊಳ್ಳುವ ಮೊದಲು ಯಾರಿಗೂ ತಿಳಸಿರಲಿಲ್ಲ. ಏನ ವಿಷಯ ಇದ್ದರೂ ನನ್ನ ಜೋಡಿ ಮಾತಾಡಾಕಿ ಹಿಂಗ್ಯಾಕ ಮಾಡಿದಳು.ರಮಾ ಅಂತೂ ನೀವು ಮಾಡಿದ ಅಚ್ಛಾದ ಪ್ರಭಾವ ಇದು ಅಂತ ಫರ್ಮಾನು ಹೊರಡಿಸಿದಳು. ತಂಗಿ ಹಿಂಗ ಭಾನಗಡಿ ಮಾಡಿಕೊಂಡಾಳ ಅಂತ ಊರಾಗ ಗೊತ್ತಾದರ ನಾ ಹೆಂಗ ಉತ್ತರಿಸಲಿ ಇದು ಮಗನ ಅಳಲು. ಮನೆತನದ ಹೆಣ್ಣುಮಗಳು ಇಂತಹ ದಾರಿ ತುಳದಾಳ ನಾಳೆ ತನ್ನ ಮಕ್ಕಳ ಜೀವನದ ಮ್ಯಾಲೂ ಇದರ ಪರಿಣಾಮ ಆಗತದ ಇದು ಸೊಸಿಯ ದಿಗಿಲು. ವಸು ಹಿಂಗ ನಿರ್ಧಾರ ತಳದದ್ದು ಅದೂ ಒಂದೂಮಾತು ತಿಳಸದ ಇದ್ದಿದ್ದು ನನಗೂ ಬ್ಯಾಸರಿಕಿ ತರಿಸಿತ್ತು. ಮದುವಿ ಮಾಡಿಕೊಂಡಿದ್ರ ಆ ಮಾತು ಬ್ಯಾರೆ ಆದರ ಹಿಂಗ ಲಿವಇನ್ ಇದೆಂತಹ ಸಂಬಂಧ..ವಸು ಯಾಕ ಇದಕ ಒಪ್ಪಿಕೊಂಡಳು..ಫೋನು ಮಾಡಿದೆ. ಶಾಂತವಾಗಿ ಉತ್ತರಿಸಿದಳು. ಒಪ್ಪಿಕೊಂಡಳು. ಪುಲಕಿತ ಜೊತೆ ಧಾರವಾಡಕ್ಕೆ ಬಂದು ವಿಷಯ ತಿಳಿಸಬೇಕು ಅಂದುಕೊಂಡಿದ್ದಳಂತೆ. ಯಾಕೋ ಅವಳ ಮಾತಿನಲ್ಲಿ ಧೈರ್ಯಕಿಂತ ಭಂಡತನದ ವಾಸನೆ ಬಂತು. ಮನೆಯಲ್ಲಿ ದೀರ್ಘ ಚರ್ಚಾ ಆತು. ವೆಂಕಣ್ಣನೂ ಬಂದ. ಎಲ್ಲರ ಅಭಿಪ್ರಾಯ ಒಂದೇ..ವಸುಗೆ ಸಿಕ್ಕ ವಿಪರೀತ ಸಲಿಗೆಯ ಪರಿಣಾಮ ಇದು.ನಾ ಅಪರಾಧಿಯ ಜಾಗೆಯಲ್ಲಿ ನಿಂತಿದ್ದೆ. ವಸುಗೆ ಸಮಜಾಯಿಷಿ,ಸಾಧ್ಯವಾದರೆ ಕೆಲಸ ಬಿಡಿಸಿ ಧಾರವಾಡಕ್ಕೆ ವಾಪಸ ಕರೆತರುವುದು ..ಇದಕ್ಕೆ ನಾನು ಬೆಂಗಳೂರಿಗೆ ಹೋಗಬೇಕು ಅಂತ ಠರಾವಾತು.

ಮಗಳು:
“ಆರ್ ಯು ಸ್ಟಿಲ್ ಎ ವರ್ಜಿನ್ ..?” ಪ್ರಶ್ನೆಕೇಳಿದವನ ಮುಖದಲ್ಲಿ ಅಸಮಾಧಾನದ ಛಾಯೆ ಎದ್ದು ಕಾಣುತ್ತಿತ್ತು. ಎತ್ತಿ ಆಡಿಸಿದವನ ಬಾಯಲ್ಲಿ ಈ ಪ್ರಶ್ನೆ ಕೇಳುವುದು ವಿಚಿತ್ರ ಹಾಗೂ ಅಸಹ್ಯವೂ…

“ನಿಂಗ ಹೇಳಲಿಕ್ಕೆ ಮುಜುಗರ ಆಗತದ ಗೊತ್ತು ನಾ ಅವಗ ಕೇಳತೇನಿ ಅವಗರೆ ಧೈರ್ಯ ಅದನೋ ಇಲ್ಲೊ ಗೊತ್ತಿಲ್ಲ…”ಅಪ್ಪನ ದನಿಯಲ್ಲಿನ ಈ ಜೋರು ಹೊಸದಾಗಿತ್ತು. ಪುಲಕಿತ ಹೇಳಿದ್ದ ಆರ್ಥಡಾಕ್ಸ ಕುಟುಂಬ ಅಂತಿ ನಿಮ್ಮದು ಹೆಂಗ ತಗೋತಾರೋ ಈ ವಿಷಯ ಅಂತ. ಲಿವ್ ಇನ್ ಸಂಬಂಧ ಒಪ್ಪಿಕೊಳ್ಳುವುದು ಸುಲಭದ ಮಾತು ಆಗಿರಲಿಲ್ಲ ಒಪ್ಪತೇನಿ ಆದರ ಅಪ್ಪನ ಮ್ಯಾಲೆ ಯಾಕೋ ನಂಬಿಕಿ ಇತ್ತು ಆದರ ಅವನ ಈಗ ಇಂತಹ ಮಾತು ಹೇಳಿದ. ಬಹುಶಃ ನನಗ ಕುಗ್ಗಸಲಿಕ್ಕೆ ಇಂತಹ ಮಾತು ಹೇಳಿರಬೇಕು. ಈಗ ನಾ ಬಗ್ಗಿದರ ಕಥಿ ಮುಗದಂಗ..

“ಅದು ಆಬಿವೀಯಸ್ ಅಲ್ಲ ಅಪ್ಪ ನಾನು ಮತ್ತು ಪುಲಕಿತ ಎರಡು ತಿಂಗಳಿಂದ ಜೋಡಿ ಇದ್ದೇವಿ.. ಕೆಲವೊಮ್ಮೆ ತೋಲ ತಪ್ಪತದ..ಆದರ ಪ್ರಿಕಾಶನ ತಗೊಂಡೇನಿ..” ಆಡುತ್ತಿದ್ದಂತೆ ನಾಲಿಗೆ ಕಚ್ಚಿಕೊಂಡೆ. ನೇರವಾಗಿ ಮುಖ ನೋಡಲಾರದೆ ತಲೆ ತಗ್ಗಿಸಿದೆ.

“ಇದೊಂದು ಕೇಳೋದು ಬಾಕಿ ಇತ್ತು..ಯಾಕ ಹಿಂಗ ನಿರ್ಧಾರ ಮಾಡಿದಿ..ಅದೇನು ಅನಿವಾರ್ಯ ಇತ್ತು..ಹಡದವರಿಗೆ ಒಂದು ಮಾತು ತಿಳಸದಂಗ.. ಇಷ್ಟು ದೊಡ್ಡಾಕಿ ಯಾವಾಗ ಆದೀ ನೀನು..ಏನೋ ನಾಕು ದುಡ್ಡು ಹೆಚಿಗಿ ಗಳಸತಿ ಅಂದ್ರ ಮನಮಾನಿ ಮಾಡಬೇಕೇನು..”..

ಯಾಕೋ ಕುಸಿದುಹೋಗುತತಿರುವ ಭಾವ..ಇಷ್ಟುದಿನ ಇಲ್ಲದ ಈ ಅಪರಾಧಿಭಾವ ಬಂತಾದರೂ ಎಲ್ಲಿಂದ….ನಾ ಸೋಲಬಾರದು.

“ನೀ ಕೇಳಿದ್ದಕ್ಕ ಉತ್ತರ ಕೊಟ್ಟೆ ಅಷ್ಟೆ…” ಉತ್ತರ ಚುಟುಕಾಗಿತ್ತು. ಅಪ್ಪ ಇನ್ನೂ ಕೆರಳಿದ.

“ನೋಡು ನಮ್ಮದು ಸಾಧಾರಣ ಮನಿತನ. ಸಣ್ಣ ಮಂದಿ ನಾವು. ಒಂದು ಹುಡುಗ ಹುಡುಗಿ ಮದುವಿಯಾಗದ ಹಿಂಗ ಒಂದ ಮನಿಯೊಳಗ ಇರೂದನ್ನ ಒಪ್ಪುವಷ್ಟು ದೊಡ್ಡವರಾಗಿಲ್ಲ ನಾವು. ನಿಮ್ಮವ್ವನ ಬಗ್ಗೆರೆ ವಿಚಾರ ಮಾಡಬೇಕಾಗಿತ್ತು ನೀನು ಸುದ್ದಿ ತಿಳ್ದಾಗಿಂದ ಕುದ್ದು ಹೋಗ್ಯಾಳ ಅಕಿ. “

 ಅವನ ದನಿಯಲ್ಲಿ ದರ್ಪ ಮಾಯವಾಗಿ ನೋವು ಇಣುಕಿತ್ತು. ಒಂದು ದೀರ್ಘವಾಗಿ ಉಸಿರು ತಗೊಂಡೆ. ಅವ್ವ ಮತ್ತು ನಾನು ಎಂದಿಗೂ ಎರಡು ಹಳಿಗಳಂಗ ಉಳದು ಹೋದಿವಿ. ಬಹಳಸಲ ವಿಚರ ಮಾಡಿದ್ದೆ ..ನಾ ಹುಟ್ಟುವ ಮೊದಲು ಅವಳಿಗೆ ಗರ್ಭ ಕಟ್ಟಿಕೊಂಡಿದ್ರ ನಾ ಹುಟ್ಟುವ ಪ್ರಮೇಯವೇ ಬರತಿರಲಿಲ್ಲ. ಅದು ಮಾಡಬ್ಯಾಡ ಅಲ್ಲಿ ಕೂಡಬೇಡ ಹಿಂಗ ಮಾಡಬೇಡ ಹೆಣ್ಣುಮಕ್ಕಳು ಹಿಂಗ ಹಟ ಮಾಡಬಾರದು ಇವ ಮಾತುಗಳು..ಕೇಳಕೋತ ದೊಡ್ಡವಳಾದೆ. ಮುಟ್ಟಿನ ಆ ಮೂರು ದಿನ ನನಗ ಅಕ್ಷರಶಃ ನರಕ ಅನಿಸತಿತ್ತು. ಉಳದ ಗೆಳೆತಿಯರ ಮನೆಯಲ್ಲಿನ ಮೋಕಳೀಕ ವಾತಾವರಣ ಯಾಕ ನಮ್ಮನಿಯೊಳಗ ಇಲ್ಲ. ಈ ಅತಿ ಅನಸುವ ಶಿಸ್ತು ಯಾಕ ಅವ್ವಳಲ್ಲಿ.. ಒಂದ ಆಶಾ ಅಂದರ ಅಪ್ಪ ಯಾವಾಗಲೂ ಬೆನ್ನು ತಟ್ಟಿದ ಹುರಿದುಂಬಿಸಿದ.

“ಅವ್ವ ಯಾವಾಗ ನಾ ಮಾಡಿದ ಕೆಲಸಾ ಒಪ್ಪಿಕೊಂಡಾಳ..ಸಾದಾ ಜೋಡಿ ಓದುವ ಹುಡುUರು ತಮಗ ತಿಳಿಯದ್ದು ಕೇಳಲು ಫೋನುಮಾಡಿದರ ಸಂಶಯ ಬರತಿತ್ತು ಅಕಿಗೆ. ಅಕಿಯಿಂದ ಯಾವ ಪವಾಡದ ನಿರೀಕ್ಷಾ ಇಲ್ಲ ನನಗ. ಆದರ ನಿನ್ನ ಮಾತು ಬ್ಯಾಸರ ತರಿಸಿತು. ನೀ ಕೇಳಿದ ವರ್ಜಿನಿಟಿ ಪ್ರಶ್ನಿ ಹೇಸಿಗಿ ಅನಿಸಿತು.ನನಗ ಇಕ್ಕಟ್ಟಿನ್ಯಾಗ ಸಿಗಸಬೇಕು ಅಂತ ಮಾತ್ರ ಆ ಪ್ರಶ್ನಿ ನೀ ಕೇಳದಿ ಹೌದಲ್ಲೊ.?” 

ನೇರವಾಗಿ ನೋಡಿದೆ. ಈಗ ಮುಖ ತಿರುಗಿಸೋ ಸರದಿ ಅವಂದು, ಒಳಗೊಳಗ ಖುಶಿ ಅನಿಸಿತು. ಆದರ ಅಪ್ಪನ ಮುಂದ ಹಿಂಗ ಕೂತು ಇಂತಹ ವಿಚಾರ ಚರ್ಚಾಮಾಡುವಷ್ಟು ನಾ ಮುಂದಹೋದೆನೇ.. ಆದರ ಇದು ಅನಿವಾರ್ಯ ಗೆಲುವಿನ ಹಾದಿಯೊಳಗ ಇದೂ ಒಂದು ಹೆಜ್ಜಿ ಮಾತ್ರ.

ಧಾರವಾಡದ ಸಾದಾ ಸೀದಾ ವಾತಾವರಣದಿಂದ ಹೊರಬಂದ ನನಗೆ ಬೆಂಗಳೂರು ಅಕ್ಷರಶಃ ಸೆಳೆದಿತ್ತು. ಕೆಲಸ ಕಲಿಯುವ ಉತ್ಸಾಹ, ಮಾಡಿದ ಕೆಲಸ ಗುರುತಿಸಿ ಕಂಪನಿ ಕೊಟ್ಟ ಪ್ರೋತ್ಸಾಹದಾಗ ದಿನ ಹೆಂಗ ಹೋದವೋ ಗೊತ್ತಾಗಲಿಲ್ಲ.ಕೆಲಸ ಮಾಡಿದ್ದು ಗಮನಿಸಿ ಬೆನ್ನು ಚಪ್ಪರಿಸಿದಾಗ ಸಿಗುವ ಮಜಾ ಒಂದ ನಮೂನಿ ಅಮಲು ತರತದ. ಅಷ್ಟು ದುಡ್ಡು ನಾ ಎಂದೂ ನೋಡಿರಲಿಲ್ಲ.ಪಗಾರ ಇನ್ನೂ ಹೆಚ್ಚಾಗಬೇಕು, ಟೀಮಲೀಡ್ ಆಗಬೇಕು,ಪ್ರಾಜೆಕ್ಟ ಮ್ಯಾನೇಜರ ಆಗಬೇಕು ಆನಸೈಟ್ ಕೆಲಸಕ್ಕ ಹೊರದೇಶಕ್ಕ ಹೋಗಬೇಕು ಬರೇ ಇವೇ ವಿಚಾರಗಳು.ಸುತ್ತಲಿನ ಕೊಲೀಗ್ಸ ಸಹ ಇವೇ ಮಾತಾಡುವವರು. ಊರಿಗೆ ಹೋದಾಗ ಅವ್ವ ಹೇಳುತ್ತಿದ್ದ ವರಗೋಳ ಪ್ರಸ್ತಾಪ ಈ ಕರಿಯರ್ ಹಪಾಪಿತನದ ಮುಂದ ಗೌಣ ಆಗಿ ತೋರತಿತ್ತು. ಮದುವಿ ಅಂತ ಆದ್ರ ಕರಿಯರ್ ಗೋಲು ಮರೀಬೇಕು ಗಂಡ, ಸಂಸಾರ ಹಿಂಗ ವ್ಯಾಪ ಬೆಳೀತದ..ಹಿಂಗಾಗಿ ಅವ್ವನ ಮಾತಿಗೆ ಕ್ಯಾರೆ ಅನಲಿಲ್ಲ.ಅಪ್ಪ ಸಪೋರ್ಟಿಗೆ ನಿಂತ ಹಿಂಗಾಗಿ ಅವಗ ನಾ ಸದಾ ಆಭಾರಿ ಇಲ್ಲವಾದರೆ ನಂದೂ ದೀಪಾಲಿಯ ಕೇಸೇ ಆಗುತ್ತಿತ್ತು.

ದೀಪಾಲಿ ಮೆಹತಾ ಜೋಡಿ ಕೆಲಸ ಮಾಡಾಕಿ.ಮುಂಜಾನೆದ್ದು ಅಕಿ ಮುಖ ಬಾಡಿದ್ರ ಹಿಂದಿನ ರಾತ್ರಿ ಫೋನಿನ್ಯಾಗ ಅಕಿ ಅಪ್ಪ ಅವ್ವನ ಜೋಡಿ ಜಗಳಾ ಮಾಡಿಕೊಂಡಾಳ ಅಂತ ಅರ್ಥ. ಕಾಫಿ ಕುಡಿಯಲು ಹೋದಾಗ ಸಿಗರೇಟಿನ ಹೊಗೆ ಉಗುಳುತ್ತ ಅಕಿ ಎಲ್ಲಾ ಹೇಳಕೋತಿದ್ದಳು.ಅಪ್ಪ ಅಮ್ಮ ಮದುವೆಗೆ ಒತ್ತಾಯ ಮಾಡುತ್ತಿದ್ದಾರೆ ಹುಡುಗ ತಂದೆಯ ಸ್ನೇಹಿತರ ಮಗ ಬಿಸಿನೆಸ್ ಮಾಡುತ್ತಿದ್ದಾನೆ.ಮದುವೆ ಆದಮೇಲೆ ಕೆಲಸ ಬಿಡಬೇಕು ಇದು ಅವರ ಒತ್ತಾಯ..ಅವಳ ಅಪ್ಪ ಅಮ್ಮ ಇದಕ್ಕೆ ಬೆಂಬಲ ಕೊಡುತ್ತಾರೆ..ದೀಪಾಲಿಗೆ ಕೆಲಸದ ಮೇಲೆ ವಿಪರೀತ ಪ್ರೀತಿ..ತಾನು ಮದುವೆಯಾದ ಮೇಲೆ ಕೆಲಸ ಬಿಡುವುದಿಲ್ಲ ಇದು ಅವಳ ವಾದ. ದಿನಾರಾತ್ರಿ ಇದೇ ವಿಷಯವಾಗಿ ಅವಳ ಅಪ್ಪ ಅಮ್ಮನ ಜೊತೆ ಜಗಳಾಡುತ್ತಿದ್ದಳು. ಕೊನೆಗೊಂದು ದಿನ ತುಂಬಿ ಬಂತು ವಾಸಿಸುತ್ತಿದ್ದ ಪಿಜಿಯ ಟೆರೇಸ ಮೇಲಿಂದ ಜಿಗಿದು ಪ್ರಾಣ ಕೊಟ್ಟಳು.

ಕರಿಯರ್ ಗೆ ಹೋಲಿಸಿದರೆ ಮದುವೆ ಎರಡನೇ ಆಯ್ಕೆ.ಯಾಗಿತ್ತು. ಹಾಗೆಯೇ ಇದು ಅನಿವಾರ್ಯಅಂತ ಅನಿಸಲಿಲ್ಲ. ಅದು ಅಡ್ಡಿ ಅನ್ನುವ ಭಾವ ಮಾತ್ರ ಪಕ್ವ ಆತು.ಪುಲಕಿತ ಅಮೇರಿಕಾದ ಪ್ರಾಜೆಕ್ಟ ನಲ್ಲಿ ಜೊತೆಯಾದವ ನನಗಿಂತ ಹತ್ತುವರ್ಷ ದೊಡ್ಡವ. ಕೆಲಸದಲ್ಲಿ ಸಹಾಯ ಮಾಡುತ್ತಿದ್ದ. ಹೆಚ್ಚಿಗೆ ಮಾತಾಡುತ್ತಿರಲಿಲ್ಲ. ನಾನೇ ಕೆದಕಿ ಕೇಳಿದಾಗ ಹೇಳಿದ. ಮದುವೆಯಾಗಿತ್ತು ಅವನಿಗೆ ಅವಳ ಜೊತೆ ದಿನಾನೂ ಕಿರಿಕಿರಿಯ ಬಾಳು. ಸುಖ ಇರಲಿಲ್ಲ. ಇವನ ತಂದೆ ತಾಯಿಗೂ ಈ ಮದುವೆಯಿಂದ ಸುಖ ಇರಲಿಲ್ಲ..ಅಷ್ಟಕ್ಕೆ ಅವಳು ನಿಲ್ಲಲಿಲ್ಲ.. ಹೆರೆಸಮೆಂಟ್ ಕೇಸು ಜಡಿದಳು.ಪರಿಚಯದ ಪೋಲಿಸ ಅಧಿಕಾರಿಗೆ ದುಡ್ಡು ತಿನ್ನಿಸಿ ಇವರು ಬಚಾವಾದರು. ಗಾಯದ ಕಲೆ ಹಾಗೆ ಉಳೀತು. ಮತ್ತೆ ಮದುವೆಯಾಗಲಾರೆ ಅಂತ ಅವನ ನಿರ್ಧಾರ. ನಾನೂ ದ್ವಂದ್ವದಲ್ಲಿದ್ದೆ ಯಾಕೋ ಮದುವೆ ಇದು ನನ್ನ ಕೆಲಸದ ಗುರಿಗಳಿಗೆ ಅಡ್ಡಿಯಾಗುತ್ತದೆ ಅಂದಾದರೆ ಅದು ಬೇಕೇ ಈ ಪ್ರಶ್ನೆಗೆ ನನಗೂ ಉತ್ತರ ಸಿಕ್ಕಿರಲಿಲ್ಲ. ಅವನ ಹಾಗೂ ನನ್ನ ನಡುವಿನ ಅಂತರ ಕಮಿಯಾಗತೊಡಗಿತು.ನಮ್ಮ ಈ ಸಂಬಂಧಕ್ಕೆ ಒಂದು ಹೆಸರು ಕೊಡಬೇಕಾಗಿತ್ತು. ಅವಾಗ ಹೊಳೆದಿದ್ದು ಈ ಲಿವ್ ಇನ್ ..ಆರುತಿಂಗಳು ಒಟ್ಟಿಗೆ ಇರೋದು ಎಲ್ಲ ಹೊಂದಿದರೆ ಮುಂದೆ ಮದುವೆಯ ಬಂಧನ ಅಂತ ಪರಸ್ಪರ ನಿರ್ಧಾರ ಮಾಡಿಕೊಂಡೆವು. ಪರಸ್ಪರ ಒಪ್ಪಿಕೊಂಡು ಮಾಡಿದ ಕ್ರಿಯೆ ಹೀಗಾಗಿ ಸೆಕ್ಸ ಬಗೆಗೂ ಗೊಂದಲಗಳಿರಲಿಲ್ಲ.
ಇದು ಕಥೆ. ಅಪ್ಪನಿಗೆ ಹೇಳಿದೆ. ಶತಪಥ ತಿರುಗುತ್ತಿದ್ದ ಅವ ರೂಮಿನ ತುಂಬ. ನನ್ನ ಒಳಗು ಎಷ್ಟು ಅರ್ಥವಾಯಿತೋ ಗೊತ್ತಿಲ್ಲ. ಆದರೆ ನನಗೆ ತೋಡಿಕೊಂಡ ವಿಚಿತ್ರ ಸಮಾಧಾನ.

ಉಪಶಾಂತಿ:
ವಾಪಸ್ಸು ಧಾರವಾಡಕ್ಕೆ ಹೋಗಲು ಅಪ್ಪ ಗಾಡಿ ಹತ್ತಿಕುಳಿತಿದ್ದಾನೆ. ಡಬ್ಬಿಯ ತುಂಬ ಪರಿಚಿತ ಮುಖಗಳೇ ಇವೆ ಯಾರಾದರೂ ಬಂದು “ಏನು ನಿಮ್ಮ ಮಗಳ ರಾಮಾಯಣ..ನೀವಾದರೂ ಬುದ್ಧಿ ಹೇಳಬೇಕಿಲ್ಲೊ…” ಅಂತ ಅಂತಾರೇನೋ ಅನ್ನುವ ಆತಂಕ. ಬುದ್ದಿ ಹೇಳಿ ಮಗಳಿಗೆ ವಾಪಸ ಕರೆದುಕೊಂಡು ಹೋಗೋ ಯೋಜನೆ ವಿಫಲ. ಹೆಂಡತಿಗೆ ಫೋನು ಮಾಡಿದಾಗ “ಗಿಡವಾಗಿ ಬಗ್ಗದ್ದು ಮರವಾಗಿ ಹೆಂಗ ಬಗ್ಗತದ..ನಿಮ್ಮ ಅಚ್ಛಾ ಎಲ್ಲಾ ಕೆಡಿಸಿತು..” ಅಂತ ಚುಚ್ಚಿದಳು. ಸೋಲು ಇದು ಒಪ್ಪಿಕೋಬೇಕು ಖರೆ. ಆದ್ರ ಈ ಸೋಲಿಗೆ ಇನ್ನೊಂದು ಆಯಾಮ ಅದ. ಮಕ್ಕಳ ಮದುವಿ ವಿಷಯದಾಗ ನಾವು ಯಾಕ ಇನ್ನೂ ಪೊಸೆಸಿವ್ ಆಗತೇವಿ..ನಾವು ಯೋಚಿಸಿದ್ದು ಮಾತ್ರ ಖರೆ ಅನ್ನುವ ವಿಚಿತ್ರ ರೋಗ ಯಾಕ ಬರತದ. ಮಗಳು ಹೇಳಿದ ದೀಪಾಲಿಯ ಕತೆ ನೆನಪಾತು. ಎದೆ ಕರಗಿತು.ಒಂದು ಹಂತ ಬಂದಾಗ ಅವರಿಗೆ ನಿರ್ಧಾರದ ಸ್ವಾತಂತ್ರ ಕೊಡಬೇಕು..ಅದರ ಸಾಧಕ ಬಾಧಕ ಅವರ ವಿಚಾರಮಾಡಬೇಕು.
ಕೊರಕಲಿದೆ ಖರೆ..ಆದ್ರ ಹೆಜ್ಜಿ ಮುಂದ ಇಡದ ಹೋದರ ದಾಟುವುದು ಹೆಂಗ..ನಾವ ಮೊದಲ ಹೆಜ್ಜಿ ಹಾಕಿದರಾತು..ದಾಟುವುದು ಸರಳ ಆಗತದ ಅವಾಗ.ರಮಾಗ ತಿಳಿಸಿ ಹೇಳಬೇಕು..ದಾಟಲು ಹೆಜ್ಜಿ ಎತ್ತಿಡಲು ಹೇಳಬೇಕು.ಹೊಸಾದು ಕಲಿಸಬೇಕು…