ಬುಧವಾರ, ಜನವರಿ 18, 2012

ನಾವು ಹಾಗೂ ವಿವೇಕ





ನಾವು ಕೇಳಿದ ಓದಿದ ವ್ಯಕ್ತಿಯ ಬಗ್ಗೆ ನಮ್ಮದೇ ಆದ ಕಲ್ಪನೆಗಳಿರುತ್ತವೆ. ಅವರ ಬಗ್ಗೆ ನಮ್ಮದೇ ಆದ ನಿಲುವನ್ನು ತಳೆದಿರುತ್ತೇವೆ.
ದೇವಸ್ಥಾನ ಕೊಟ್ಟು ಗೌರವಿಸಿರುತ್ತೇವೆ. ಮುಂದೆ ಎಂದೋ ಆ ವ್ಯಕ್ತಿಯಬಗ್ಗೆ ಬೇರೆ ಅಭಿಪ್ರಾಯ ಕೇಳಿಬಂದಾಗ ನಮಗಾಗುವುದು
ಮೊದಲು ಸಿಟ್ಟು,ಕೋಪ ಇತ್ಯದಿ. ಅದು ತಿಳಿಯಾದಮೇಲೆ ಮನದಲ್ಲಿ ಅನೇಕ ಪ್ರಶ್ನೆಗಳು ಏಳುತ್ತವೆ.ಹೌದೆ ಹೀಗೂ ಇರಲು ಸಾಧ್ಯವೇ
ಅಥವಾ ನಮ್ಮ ಆರಾಧ್ಯ ದೈವ ಈ ಕೆಳಮಟ್ಟ ನಿಜಕ್ಕು ತಲುಪಿದ್ದನೆ ಅಂತ. ನಾನಿಲ್ಲಿ ಉಲ್ಲೇಖಿಸುತ್ತಿರುವುದು ಪ್ರಜಾವಾಣಿಯಲ್ಲಿ
ಬಂದ ವಿವೇಕಾನಂದರ ಬಗೆಗಿನ ಲೇಖನದ ಬಗ್ಗೆ.

ದಿನೇಶ್ ಅಮಿನಮಟ್ಟು ನನ್ನ ಶತ್ರು ಅಲ್ಲ ಹಾಗೆಯೆ ವಿವೇಕಾನಂದರ ಅಥವಾ ರಾಮಕೃಷ್ಣ ಮಠದ ಅನುಯಾಯಿಯೂ ನಾ ಅಲ್ಲ.
ಅಭುವ್ಯಕ್ತಿ ಸ್ವಾತಂತ್ರ್ಯ ಇದು ಅವಿರತ ಕೇಳಿಬರುವ ಮಾತು.ದಿನೇಶ್ ಅವರ ಲೇಖನ ಒಂದುಕಡೆ ವಾಲಿದೆಯೆ ಅಥವಾ ಅಭುವ್ಯಕ್ತಿಯ
ಸೋಗಿನಲ್ಲಿ ಎಡಪಂಥೀಯ ಅಥವಾ ಹಿಂದೂವಿರೋಧಿಯೇ ಇದು ಗಮನಿಸತಕ್ಕದ್ದು.ಇದು ಅವರ ಸ್ವಂತ ವಿಚಾರವಲ್ಲ.ಬದಲು
ಮಣಿಸಂಕರ್ ಮುಖರ್ಜಿ ಬರೆದ ಪುಸ್ತಕ ಓದಿ ಈ ಲೇಖನ ಬರೆದಿದ್ದಾರೆ. ವಿವೇಕರ ಇನ್ನೊಂದು ಮುಖದ ಪರಿಚಯ ಇದು ಮಾಡಿಸುತ್ತದೆ.
ನಾವುಗಳು ಚಿತ್ರದಲ್ಲಿ ನೋಡಿದ ಆಕಾರಕ್ಕೆ ವಿರುದ್ಧವಾಗಿ ಅವರು ಬಡಕಲಾಗಿದ್ದರು ಮೇಲಾಗಿ ನಾನಾ ರೋಗಬಾಧೆಯಿಂದ ನರಳುತ್ತಿದ್ದರು--
ಲೇಖನದಲ್ಲಿ ರೋಗಗಳ ದೊಡ್ಡ ಪಟ್ಟಿ ಇದೆ--.ಇನ್ನೊಂದು ವಿಷಯ ಒತ್ತಿ ಹೇಳಲಾಗಿದೆ ಅವರು ಅನ್ಯಧರ್ಮೀಯರನ್ನು ಪ್ರೀತಿಸುತ್ತಿದ್ದರು
ಮ್ಲೇಚ್ಛರ ಜೊತೆ ಸಹವಾಸವಿತ್ತು.ಯೇಸುಬಗ್ಗೆ ಗೌರವವಿತ್ತು ಎಂಬುದನ್ನು ಹೇಳಲಾಗಿದೆ. ಹಾಗೆಯೇ ಹಿಂದು ಧರ್ಮದಲ್ಲಿ ಬೀಡುಬಿಟ್ಟಿರುವ
ಜಾತೀಯತೆ, ಮಡಿ,ಮೈಲಿಗೆಗಳ ಬಗ್ಗೆ ಅವರಲ್ಲಿ ಜುಗುಪ್ಸೆ ಇತ್ತು. ಹೀಗಾಗಿಯೇ ಅವರು ಸ್ವದೇಶಿಯರಲ್ಲಿ ಅಪ್ರಿಯರಾಗಿದ್ದರು.ಮ್ಲೇಚ್ಛ
ಜೊತೆ ಅವರು ಊಟಮಾಡುತ್ತಿದ್ದರು ಎಂಬ ಕಾರಣಕ್ಕಗಿಯೇ ಅವರನ್ನು ದ್ವೇಷಿಸುತ್ತಿದ್ದರು. ಇನ್ನು ಅವರು ತಿಂಡಿಪೋತರಾಗಿದ್ದರು
ಹಾಗೂ ಮಾಂಸಾಹಾರ ಅವರಿಗೆ ಪ್ರಿಯವಾಗಿತ್ತು ಎಂಬ ಉಲ್ಲೇಖವಿದೆ. ಹಿಂದೆ ನಮ್ಮ ಆದಿಮಾನವರೆಲ್ಲ ಅವರೆ ತಾನೆ ಕಾಲಸರಿದಂತೆ
ನಾವು ನಮ್ಮ ಮೇಲೆ ಅನೇಕ ಕಟ್ಟಳೆಗಳನ್ನು ಹೇರಿಕೊಂಡೆವು ಇದು ಮೇಧ್ಯ ಅದು ಅಮೇಧ್ಯ ಅಂತ. ಅದು ಸರಿನೋ ತಪ್ಪೊ ಗೊತ್ತಿಲ್ಲ
ವಿವೇಕರಿಗೆ ಈ ಕಟ್ಟುಪಾಡು ಸರಿ ಕಂಡಿರಲಿಕ್ಕಿಲ್ಲ ಹೀಗಾಗಿ ಇದನ್ನು ವಿರೋಧಿಸುತ್ತಿದ್ದರು ಮಾತ್ರವಲ್ಲ ತಮ್ಮ ಈ ನಡಾವಳಿಯಿಂದ
ಅನೇಕರ ವಿರೋಧವನ್ನು ಅವರು ಎದುರಿಸಿದ್ದರು.
ಲೇಖನ ಅನೇಕ ಪ್ರಶ್ನೆಗಳನ್ನು ಎತ್ತುತ್ತೆ. ನಾವು ಪೂಜಿಸಿಕೊಂಡು ಬಂದವರ ಬಗ್ಗೆ ನಮಗೆಷ್ಟು ಅರಿವಿದೆ ಅವರು ಪ್ರಶ್ನಾತೀತರೆ
ಅವರ ಜೀವನಶೈಲಿಯ ಬಗ್ಗೆ ವಿಮರ್ಶಿಸುವುದು ತಪ್ಪೇ ಅಂತ.ನಮ್ಮಲ್ಲಿ ಪುರಾಣಗಳಿವೆ ಮಹಾಕಾವ್ಯಗಳಿವೆ ಹಾಗೆಯೇ ವೇದ ಗಳಿವೆ
ನಿಜ. ಆದರೆ ರಾಮನ ಗುಣಸ್ವಭಾವವನ್ನಾಗಲಿ ಅಥವಾ ಕೃಷ್ಣನ ಲೀಲೆಗಳ ಬಗ್ಗೆಯಾಗಲಿ ನಾವು ಹಗುರವಾಗಿ ಮಾತನಾಡುವಂತಿಲ್ಲ
ಮುಖ್ಯವಾಗಿ ಈ ಮಹಾನಾಯಕರ ಸಾಹಸಗಳ ಬಗ್ಗೆ ಪೀಳಿಗೆಯಿಂದ ಪೀಳಿಗೆ ವರೆಗೆ ಗುಣಗಾನವೇ ಪ್ರಾಮುಖ್ಯತೆ ಪಡೆದಿದೆ.
ಹೋಗಲಿ ಇತ್ತೀಚೆಗಿನ ಬಸವ, ಬುದ್ಧ ಹಾಗೂ ಅಂಬೇಡ್ಕರ್ ಬಗ್ಗೆ ನಮಗೆ ತಿಳಿದ ಅನೇಕ ಸಂಗತಿಗಳಿವೆ ಆದರೆ ಇಲ್ಲೂ ಅವರ ಗುಣಗಾನವೇ
ಪ್ರಧಾನವಾಗಿ ಒಂದು ಗುಂಪಿನ ದನಿಯೇ ದೊಡ್ದದಾಗಿ ನಾವು ಎತ್ತುವ ಪ್ರಶ್ನೆಗಳು ಕ್ಷೀಣವಾಗಿ ಬಿಡುವ ಭಯಇದೆ ಹಾಗೂ ಇದು ವಾಸ್ತವ ಕೂಡ.
ಅದರಲ್ಲೂ ರಾಜಕೀಯದ ಕರಿನೆರಳು ಎಲ್ಲ ಕಡೆ ಆವರಿಸಿದೆ ರಾಜಕೀಯಲಾಭದ ಮುಂದೆ ಅಭಿಪ್ರಾಯಗಳಿಗೆಲ್ಲಿದೆ ಕಿಮ್ಮತ್ತು.
ಅಭಿವ್ಯಕ್ತಿ ಸ್ವಾತಂತ್ರ್ಶ ಇದು ಬರೀ ಹುಸಿ ಅನ್ನುವುದು ಸಲ್ಮಾನ್ ರಶ್ದಿಯ ಭಾರತ ಭೇಟಿಗೆ ಉಂಟಾದ ವಿರೋಧದಿಂದಲೆ ಗೊತ್ತಾಗುತ್ತದೆ.
ಇಂತಹ ಸಂಧಿಗ್ಧತೆಯಲ್ಲೂ ಧೈರ್ಯವಾಗಿ ಪ್ರಶ್ನೆ ಎತ್ತಿದ ದಿನೇಶ್ ಅಭಿನಂದನೆಗೆ ಅರ್ಹರು ಅಲ್ಲವೆ.

2 ಕಾಮೆಂಟ್‌ಗಳು:

  1. ವಿವೇಕಾನಂದರು ಪ್ರಥಮವಾಗಿ ಒಬ್ಬ rationalist. ಕಾಯಸ್ಥರಾದ ಅವರಿಗೆ ಮಾಂಸಾಹಾರ ವರ್ಜ್ಯವಾಗಿರಲಿಲ್ಲ. (ಇವರಂತೆಯೇ ಅರವಿಂದ ಘೋಷರಿಗೂ ಸಹ ಮಾಂಸಾಹಾರ ಇಷ್ಟವಾಗಿತ್ತು.ಬಂಗಾಲಿ ಬ್ರಾಹ್ಮಣರಾದ ರಾಮಕೃಷ್ಣ ಪರಮಹಂಸರು ಮತ್ಸ್ಯಾಹಾರಿಗಳಾಗಿದ್ದರು.)ವಿವೇಕಾನಂದರದು ನೋಡಲು ಸ್ವಲ್ಪ ಸ್ಥೂಲವಾದ ಶರೀರವೇನೋ ಹೌದು. ತಮ್ಮ ಜೀವನದ ಪಯಣದಲ್ಲಿ ಅನೇಕ ಕಷ್ಟಗಳನ್ನು ಅನುಭವಿಸಿದ ಅವರು ಅನೇಕ ರೋಗಗಳಿಗೆ ತುತ್ತಾದದ್ದೂ ನಿಜ. ಇದ್ಯಾವದೂ ವಿವೇಕಾನಂದರ ಘನತೆಯನ್ನು ಕಡಿಮೆ ಮಾಡಲಾರದು!

    ಪ್ರತ್ಯುತ್ತರಅಳಿಸಿ
  2. ನಿಮ್ಮ ಲೇಖನ ಕಣ್ಣು ತೆರೆಸುವಂತಿದೆ , ಪ್ರತೀಯೊಬ್ಬ ಮಹನೀಯರು ತಮ್ಮದೇ ಆದ ದೌರ್ಬಲ್ಯವನ್ನು ಹೊಂದಿದ್ದರು.ಯಾವುದೇ ಐತಿಹಾಸಿಕ ಪುರುಷ ಎಂದು ಗುರುತಿಸಲ್ಪಡುವ ವ್ಯಕ್ತಿ ತನ್ನನ್ನು ಹೋಗಲಿ ಎಂದು ಯಾರಲ್ಲೂ ಅಂಗಲಾಚಲಿಲ್ಲ.ಹಾಗು ಮುಂದೆ ತನ್ನನ್ನು ದೇವತಾ ಮನುಷ್ಯನೆಂದು ಗುರುತಿಸಬೇಕೆಂದು ಬಯಸಲಿಲ್ಲ.ಆದರೆ ಆ ಪಟ್ಟವನ್ನು ನೀಡಿದ್ದು ಅಂದಿನ ಸಮಾಜ , ನಾವು ಅವರಲ್ಲಿನ ದೌರ್ಬಲ್ಯ ಹುಡುಕಿ ಕಾದಾಡುವ ಬದಲು ಅವರಲ್ಲಿನ ಒಳ್ಳೆಯ ಗುಣಗಳನ್ನು ಗುರುತಿಸಿ ಸಾಧ್ಯವಾದರೆ ಅನುಸರಿಸೋಣ.ಇಲ್ಲದಿದ್ದಲ್ಲಿ ಬಿಟ್ಟು ಬಿಡೋಣ. ಇದು ನನ್ನ ಅನಿಸಿಕೆ.
    ಪ್ರೀತಿಯಿಂದ ನಿಮ್ಮವ [ನಿಮ್ಮೊಳಗೊಬ್ಬಬಾಲು. ]

    ಪ್ರತ್ಯುತ್ತರಅಳಿಸಿ