ಶನಿವಾರ, ಫೆಬ್ರವರಿ 25, 2012

ಮಠಗಳು ಈಗ ಮಾನ್ಯವೇ

ಮೊನ್ನೆ ಸುವರ್ಣಚಾನೆಲ್ ನಲ್ಲಿ ಚರ್ಚೆ ಇತ್ತು. ನಮ್ಮ ಕರ್ನಾಟಕವನ್ನು ಸಧ್ಯ ಬಾಧಿಸುತ್ತಿರುವ
ರಾಜಕೀಯ ಅಸ್ಥಿರತೆ ಬಗ್ಗೆ. ಅಲ್ಲಿ ಕರ್ನಾಟಕ ರಾಜ್ಯದ ಪಂಚಮಸಾಲಿಸಭಾದ ಅಧ್ಯಕ್ಷರೂ
ಹಾಜರಿದ್ದರು. ಚರ್ಚಿಸುತ್ತ ಅವರಂದ ಮಾತು ಅದರ ಸಾರಾಂಶ ವಿಷ್ಟೇ ನಮ್ಮ ರಾಜ್ಯದಲ್ಲಿ
ವೀರಶೈವರದು ಪ್ರಾಬಲ್ಯ ಜನಸಂಖ್ಯೆಯಲ್ಲಿ ಹೀಗಿದ್ದು ಆ ಪಂಗಡದ ಯಾವ ಮುಖಂಡನೂ
ಮುಖ್ಯಮಂತ್ರಿಯಾಗಿ ಪೂರ್ಣಾವಧಿ ಮಾಡಲಿಲ್ಲ ಒಂದಿಲ್ಲೊಂದು ವಿಘ್ನ ಬಂದವು ಹೀಗಾಗಿ
ಈಗ ಸದಾನಂದಗೌಡ್ರು ಕೆಳಗಿಳಿದರೆ ವೀರಶೈವರೆ ಮುಖ್ಯಮಂತ್ರಿಯಾಗಬೇಕು ಎಂಬ
ಹಕ್ಕೊತ್ತಾಯ ಮಾಡಿದ್ರು. ಬಿಜೆಪಿ ಅಧಿಕಾರಕ್ಕೆ ಬರಲು ಅ ಸಮುದಾಯದ ಕೊಡುಗೆ ಇದೆ
ಇಲ್ಲವಾದರೆ ದಕ್ಷಿಣಭಾರತದ ಹೆಬ್ಬಾಗಿಲು ತೆರೆಯುತ್ತಿರಲಿಲ್ಲ ಇದನ್ನು ಆದ್ವಾಣಿ,ಜೇಟ್ಲಿ ಸಹ
ಒಪ್ಪುತ್ತಾರೆ. ಆ ಸಮುದಾಯದವರೇ ನಾಯಕರಾಗಿದ್ದು ಗೌಡ್ರು ಮೋಸ ಮಾಡಿದ್ರು ಅನ್ನುವ
ಅನುಕಂಪ ಸೇರಿ ಅವರು ಮುಖ್ಯಮಂತ್ರಿಯಾದ್ರು. ಅವರಿಗೆ ಒತ್ತಾಯ ಹೇರಲಾಗಿತ್ತೋ ಅಥವಾ
ಉಪಕಾರಸ್ಮರಣೆಯೋ ಗೊತ್ತಿಲ್ಲ ಮಠಮಾನ್ಯಗಳಿಗೆ ಹೇರಳವಾದ ದೇಣಿಗೆ ಸರಕಾರದಿಂದ
ಸಿಕ್ಕಿತು. ಊರಲ್ಲಿನ ರಸ್ತೆ,ಹಳ್ಳಿಗಾಡಿನಲ್ಲಿ ಹೆಣ್ಣು ಮಕ್ಕಳಿಗೆ ಹೋಗಲು ಕಕ್ಕಸ್ಸು ಇಲ್ಲದಿದ್ದರೂ
ದೇಣಿಗೆ ನಿಲ್ಲಲಿಲ್ಲ. ಸರಕಾರದ ದೂರಾಲೋಚನೆ ಸರಿಯಾಗಿತ್ತು..ಅವಶ್ಯ ಬಿದ್ದಾಗ ಇಲ್ಲಿಯ
ಜಗದ್(?)ಗುರುಗಳು ಪರವಾಗಿ ನಿಂತರು. ತಮ್ಮ ಉಪಕಾರ ಬುದ್ಧಿ ತೋರಿದ್ರು. ಹಿಂದೆಂದೂ
ಆಗದ ರೀತಿ ಇದು ಮಠಗಳ ಮಾತು ವೇದವಾಕ್ಯವಾಯಿತು ಅಷ್ಟೇ ಅಲ್ಲ ತಮ್ಮ ಯಡವಟ್ಟುಗಳನ್ನು
ಮುಚ್ಚಿಹಾಕಲು ಸ್ವಾಮಿಗಳ ಕಾಲು ಹಿಡಿದರೆ ತಪ್ಪೇನಿಲ್ಲ ಅನ್ನುವ ಸ್ಥಿತಿ ಎಲ್ಲರಿಗು. ಕೆಲ ಮಠಾಧೀಶರು
ಮಧ್ಯಸ್ಥಿಕೆವಹಿಸಿ ರಾಜಿ-ಕಾಝಿ ಮಾಡ್ಸಿ ಹೆಸರು ಗಳಿಸಿಕೊಂಡ್ರು--ಉದಾ.ನಮ್ಮ ಅಬಕಾರಿ ಸಚಿವರ
ಪ್ರಸಂಗ.--.ಈ ರೀತಿ ಮಠಾಧೀಶರು ಜಪ ತಪ ಬಿಟ್ಟು ಹಿಂದೆ ರಾಜರ ಆಸ್ಥಾನದಲ್ಲಿ ಮೆರೆಯುತ್ತಿದ್ದ
ಮಂತ್ರಿಗಳಾದರು , ಮುಖ್ಯನಿರ್ಣಯಗಳು, ಮಂತ್ರಿ ಪದವಿ, ಸಂಪುಟ ವಿಸ್ತರಣೆ ಹೀಗೆ ಸ್ವಾಮಿಗಳ
ಪ್ರಭಾವಳಿ ಎಲ್ಲೆಲ್ಲೂ ಇದೆ. ಬಿಜೆಪಿ ಸರಕಾರದಲ್ಲಿ ಅತು ಮಿತಿಮೀರಿದೆ.ಈಗ ಕೊಡುಕೊಳ್ಳುವಿಕೆಯ
ವ್ಯವಹಾರದಲ್ಲಿ ಸಾಮನ್ಯ ಜನರಬಗ್ಗೆ ಅವರ ಸಮಸ್ಯೆಗಳನ್ನು ಆಲಿಸಲು ಯಾರಿಗಿದೆ ಪುರುಸೊತ್ತು.
ನಾವು ಏನೇ ಮಾಡಿದ್ರೂ ನಮ್ಮ ಹಿಂದೆ ಮಠಇದೆ ನಮ್ಮ ಸಮುದಾಯವಿದೆ ಅನ್ನುವ ಗರ್ವ ಬಂದಿದೆ
ಮೊನ್ನೆಯ ನೀಲಿಕಾಂಡವನ್ನೇ ತಗೊರ್ರಿ. ಅಥಣಿಯಲ್ಲಿ ಅಂದು ಕೇಬಲ್ ಟೀವಿ ಕತ್ತರಿಸಲಾಗಿತ್ತು..
ಮರುದಿನದ ಪೇಪರ್ ಬರದಹಾಗೆ ಮಾಡಲಾಯಿತು ಸವದಿಯ ಬೆಂಬಲಿಗರು ಪಾಳೇಗಾರರಂತೆ
ವರ್ತಿಸಿದರು.ಇಷ್ಟಾಗಿಯೂ ಅಲ್ಲಿದ್ದ ಒಬ್ಬ ಜಗದ್ಗುರು ಅವರದೇನೂ ತಪ್ಪಿಲ್ಲ ಹಾಗೂ ಸಮರಂಭ ಆಯೋಜಿಸಲು
ಹುನ್ನಾರಮಾಡಲಾಯಿತು.ಕೊನೆಗೆ ಆ ಗುರುವಿಗೆ ತಪ್ಪಿನ ಅರಿವಾಯಿತೇನೋ ಅದು ಸಾಧ್ಯಆಗಲಿಲ್ಲ.
ಮಠಗಳು ಯಾರಿಂದಲೂ ಸ್ಥಾಪಿತವಲ್ಲ ನಮ್ಮ ದೇಶದ ಯಾವುದೇ ಯುಗಪುರುಷ ತನ್ನ ನಂತರ
ಆರಾಧನೆ ನಿರಂತರವಾಗಲಿ ಎಂದು ಮಠಸ್ಥಾಪಿಸಲಿಲ್ಲ ಬದಲು ತಾವಿದ್ದಷ್ಟು ದಿನ ಸತ್ಕಾರ್ಯ ಮಾಡಿದರು,
ಒಳ್ಳೆಯದನ್ನು ಹೇಳಿದ್ರು ಒಳ್ಳೆಯದನ್ನ ಮಾಡಿದ್ರು. ಆದರೆ ಅವರ ಹೆಸರು ಹೇಳಿಕೊಂಡ ಅವರ ಶಿಷ್ಯ ಅನಿಸಿಕೊಂಡವರು
ಅವರ ವಚನ,ಪದ ತಮ್ಮ ಸ್ವಾರ್ಥಕ್ಕೆ ಬಳಸಿಕೊಂಡರು, ಗದ್ದಿಗೆ, ವೃಂದಾವನ ನಿರ್ಮಾಣ ಮಾಡಿದ್ರು
ಜನ ಮರುಳಾದ್ರು ಮುಗ್ಧತೆಯನ್ನೇ ಬಂಡವಾಳಮಾಡಿಕೊಂಡ ಶಿಷ್ಯರು ಮಠಾಧೀಶರಾದ್ರು ಅಡ್ಡಪಲ್ಲಕ್ಕಿ,
ಪಾದಪೂಜೆ ಇತ್ಯಾದಿ ಆಚರಣೆಗೆ ಬಂದವು. ನಿಜ ಧ್ಯೇಯ, ಕರ್ಮ, ಧರ್ಮ ಎಲ್ಲ ಮರೆತ್ರು..ಇಂಜಿನೀಯರಿಂಗ್ ,
ಮೆಡಿಕಲ್ ಕಾಲೇಜು ಆದವು. ಜಾತಿಗೊಂದರಂತೆ ಮಠಗಳಾದವು ಅವುಗಳ ಪೀಠ ಅಲಂಕರಿಸಲು
ಜಗದ್ಗುರುಗಳು ಉದ್ಭವವಾದರು.
ಎಲ್ಲೋ ಒಂದೆರಡು ಮಠ ಬಿಟ್ಟರೆ ಎಲ್ಲ ಮಠಗಳ ಹೆಸರಿನಲ್ಲಿ ಕೋಟಿಗಟ್ಟಲೆ ಆಸ್ತಿ ಇದೆ..ಯಾರೂ ಪ್ರಶ್ನಿಸುವ
ಹಾಗಿಲ್ಲ ಅದರ ಮೂಲವನ್ನು. ಮಠಕಟ್ಟಿದ ಧ್ಯೇಯಗಳು ಗಾಳಿಗೆ ತೂರಿ ಹೋಗಿ ಅವು ದಲಾಲಿ ಅಂಗಡಿಗಳಾಗಿವೆ
ನಮ್ಮ ರಾಜ್ಯದಲ್ಲಿ ಇವುಗಳ ಪಿಡುಗು ವಿಪರೀತ. ಅದರಲ್ಲಿ ಈ ನಾಲ್ಕು ವರ್ಷದಲ್ಲಿ ಪುಕಾರು ಅತಿ ಆಗಿದೆ.
ಮಹಾರಾಷ್ಟ್ರದಲ್ಲೂ ಪುಣ್ಯ ಪುರುಷರಿದ್ದರು ತುಕಾರಾಮ್. ಗೋರ ಮುಂತಾಗಿ ಆದರೆ ಅವರ ಹೆಸರು ಬಳಸಿಕೊಂಡು
ಪೀಠನಿರ್ಮಿಸಿ ವ್ಯವಹರಿಸುವ ಬುದ್ಧಿ ಅವರಿಗೇಕೆ ಬರಲಿಲ್ಲವೋ.....

ನಾನೇ ಬರೆದ ಹನಿ ಇದೆ

ಇರುವುದೊಂದೇ ಜಗತ್ತು
ದಿನೆದಿನೇ ಕುಲಗೆಡುತ್ತಿದ್ದರೂ
ಉದಯಿಸುತ್ತಲೇ ಇದ್ದಾರೆ
ನಾಯಿಕೊಡೆಗಳಂತೆ...
ಈ ಜಗದ್ಗುರುಗಳು...!

1 ಕಾಮೆಂಟ್‌: